Monday, December 24, 2012

ಕಹಿ ತೆ

ಮೊನೆ ಮಾತು ಚುಚ್ಚಿದ್ದು ಹೌದು
ಗಾಯ ಒಣಗಿ ಉದುರಿ ಹೊಸ ಚರ್ಮ
ಕಲೆಯೂ ಕಾಣದಾಗಿದೆ.
ಆದರೆ
ಮಾತಾಡದೆ ಎದ್ದು ಹೋದದ್ದು,
ಬಂದ ಸಿಟ್ಟು ನುಂಗಿ ಮುಖ ತಿರುಗಿಸಿದ್ದು
ಇರುವುದನ್ನೇ ಮರೆತು ಹೋಗಿದ್ದು
ಸೇತುವೆಯ ಮೇಲೆ ಘನೀಭವಿಸುವ 
ನಿರ್ವಾತ....
ಒಣಗಿದ ಗಾಯಕ್ಕೆ ಉಪ್ಪು ನೀರೂಡಿದ ಹಾಗಿತ್ತು.
ಸಮಾಜ, ವ್ಯವಸ್ಥೆ, ವ್ಯಕ್ತಿ-ಶಕ್ತಿ-ಸಮಷ್ಟಿ
ಪುಂಖಾನುಪುಂಖ ಲೇಖನಗುಚ್ಛಗಳಿವೆ
ಶೆಲ್ಫಲ್ಲಿ
ಜೀವನೋತ್ಸಾಹ ಯಾಕೋ
ನೇತಾಡುತ್ತಿದೆ ಔದಾರ್ಯದ
ಉರುಳಲ್ಲಿ.

ನಿಲ್ಲದೆ ನಡೆವ ಕಾಲದ
ಜತೆಗೇ ಓಡುತ್ತಾ
ತಿಳಿಯದೆ ಹೋಗಿರಬಹುದು
ಬದಲಾವಣೆ
ಅಥವಾ
ಓಡುತ್ತ ಓಡುತ್ತ ಹೋದವರಿಗೆ
ತಿಳಿಯಲು ಸಮಯ ಸಿಕ್ಕಿದ್ದೆಲ್ಲಿ!


ನಿಲ್ದಾಣ ಬಯಸದೆ ಪಯಣವನೆ ಧ್ಯಾನಿಸಿದವರಿಗೆ
ನಿಲ್ದಾಣ ಮತ್ತು ತಂಗುದಾಣದ
ವಿಳಾಸದ ಹಂಬಲು ಬಂದಿದ್ದು
ವಯಸ್ಸಾಗಿ ಹೋದದ್ದರ ಲಕ್ಷಣ
ಎಂಬಿತ್ಯಾದಿ
ಜಾಣ-ಜಾಣೆಯರು ಮಾತಾಡಿಕೊಂಡಿದ್ದಾರೆ.
ಓದಿ ಅಹ ಅಹ ಅಂದುಕೊಂಡ
ಸಾಲುಗಳೆಲ್ಲ
ಇದ್ದಕ್ಕಿದ್ದಂಗೆ ಇಲ್ಲೆ ಪಕ್ಕದಲ್ಲಿ
ಘಟಿಸುವುದು ಬಹುಶಃ
ದಾರಿ ಸಾಗಿಬಂದ ದೂರವಿರಬೇಕು
ಚೋದ್ಯವೆಂದರೆ
ಈಗ
ಅಹ ಎನ್ನುವುದಿರಲಿ
ಉಸಿರು ಸಿಕ್ಕಿಕೊಳ್ಳುವುದು
ಮಾತು ಉಕ್ಕಡಿಸಿ ಬಂದೂ
ಬಾಯಿ ಕಟ್ಟುವುದು
ಕಣ್ಣ ನೀರು ಹನಿಯದ ಹಾಗೆ
ತಡೆದು
ಕಿರಿನಗು ಚೆಲ್ಲುವುದು..


ನೋವಿನ ಕಹಿ
ಕಳೆಯುವ ಬಗೆ
ಅರಿಯಲು
ಕದಳೀವನವೆ ಬೇಕು
ಎಚ್ಚರದ ಬದುಕು ಸೋಸಿ
ಕನಸು ಬನಿಯಿಳಿಯಬೇಕು.

Thursday, December 13, 2012

ಉಲ್ಕಾಪಾತ..

ಪರಿಚಯವಿಲ್ಲದ ದೇವರಿಗಿಂತ
ಲಾಗಾಯ್ತಿನಿಂದ ಗೊತ್ತಿರುವ ದೆವ್ವವೇ ಮೇಲು
ಎಂದ ಮಾತು
ನಿಜವಿರಬಹುದು,
ಆದರೆ
ಈಗ ಬೆಂಕಿಯಿಂದ ಬಾಣಲೆಗೆ
ಹಾರಲೇಬೇಕಿರುವ ಸಮಯ.
ಯೋಚನೆ ಮಾಡಿದಷ್ಟೂ
ಗೊಂದಲದ ಅಲೆಗಳೇ.
ಸುಮ್ಮನೆ ಕುಳಿತಿರಲೂ
ಆಗದಷ್ಟು ಬ್ಯುಸಿಯಾಗಿದ್ದೇನ್ಬಂತು
ನಾಳೆ ಬೆಳಗಿನ ಆಗಸದಲ್ಲಿ
ನೋಡಬೇಕು:
ಜೆಮಿನೈಡ್ ಉಲ್ಕಾಪಾತವಿದೆಯಂತೆ!
ಹಳೆಯದೊಂದು
ಉತ್ಸಾಹದ ಚಂದಿರನೂ
ಉದುರಲಿದ್ದಾನೆ ಜೊತೆಗೆ,
ಉರಿದು ಬಿದ್ದ ಉಲ್ಕೆಯ ಚೂರಿನಂತೆ.
ಇದು ಬಹಳ ಮೊದಲೆ
ನಿಶ್ಚಯವಿದ್ದ ಹಾಗೆ,
ಈಗ ಅಂದುಕೊಂಡಿದ್ದು
ಅವತ್ತೇ ಯಾವತ್ತೋ
ಬುಕ್ಕಾಗಿದ್ದ ಹಾಗೆ.
ಮುಂದೆ
ಇಂತಹದೇ ಒಂದು ಸಂಜೆಯಲ್ಲಿ
ಅವಳನ್ನಬಹುದು
ನೀನು ಹಾಗ್ ಮಾಡಬಾರದಿತ್ತು
ಅಥವಾ ಇದೇ ಒಳ್ಳೆಯದು.
ಅವಳೊಬ್ಬಳೇ ಏನು,
ಜೊತೆಗೆ ಇನ್ನೊಬ್ಬನೂ ಇದ್ದಾನೆ.

ಹಾಗಂತ....
ಇವತ್ತು,
ಅಂತಹದೇ ಒಂದು ಸಂಜೆಯಲ್ಲಿ
ನಾನು ನಿರ್ಧರಿಸುವುದು ಹ್ಯಾಗೆ?
ಇಷ್ಟಕ್ಕೂ..
ನನ್ನ ಶಿಲುಬೆ ನನ್ನ ಬೆನ್ನಿಗೇ ಇರಬೇಕಲ್ಲದೆ
ಅವರ ಕನಸುಗಳನ್ನು ನಾನು ಕಾಣುವುದು ಹ್ಯಾಗೆ?
ನನ್ನ ಕನಸುಗಳನ್ನು ಅವರ ಮೇಲೆ ಹೇರದ ಹಾಗೆ-
ಹಳೆಯದೆಲ್ಲವನ್ನು ಕಟ್ಟಿಟ್ಟು ಸುಮ್ಮನೆ ಹೀಗೆ-
ಇರುವುದಕ್ಕೆ ಕಲಿಯಬೇಕಿದೆ.
ಎಲ್ಲ ದಾರಿಗಳಲ್ಲೂ ಅಷ್ಟು ದೂರ ನಡೆದು
ತಿರುವು ಹಿಡಿದವಳಿಗೆ
ಕಲಿಯುವುದು ಕಷ್ಟವಿರಲಾರದು.
ಬದುಕು ಚಂದವಿದೆ.

Wednesday, December 5, 2012

ಅವಳಿಗನ್ನಿಸಿದ್ದು...

ಮಲಗಿದ್ದೇನೆ. ಛಾವಣಿಯನ್ನು ದಿಟ್ಟಿಸುತ್ತಾ.
ಅಲ್ಲೇನಿದೆ.
ಧೂಳು ಹೊಡೆಯಬೇಕಿರುವ ಫ್ಯಾನು, ಮೂಲೆಯಲ್ಲಿ ಅಲುಗಾಡುವ ಜೇಡರ ಬಲೆ. ಕಿಟಕಿಯಿಂದ ತೂರಿಬಂದ ಹೊರಗಿನ ದೀಪದ ಬೆಳಕಿನ ಕಿಂಡಿಕಿಂಡಿ ಪ್ರತಿಫಲನ. ಒಳಗಿನ ಕತ್ತಲೆಯಲ್ಲಿ ಸಣ್ಣಗೆ ಮಳೆಯಂತೆ ಹನಿಯುತ್ತಿರುವ ರಾಗ್ ಭೀಮ್ ಪಲಾಶೀ. ದಿನದ ಅಂಚಲ್ಲಿ ಮನೆಗೆ ಬಂದು ಸುಸ್ತಾಗಿ ಮಲಗಿದ್ದೀ ನೀನು. ಇರುಳಲ್ಲೇ ದಿನವನ್ನರಸುವ ವ್ಯರ್ಥ ಪ್ರಯತ್ನ ದುರಂಧರೆ ನಾನು.
ಮಗ್ಗುಲು ಹೊರಳಿ ನಿನ್ನ ಕೈಯ ಬೆರಳು ಸೋಕಲಿ ಅಂತ ಬಯಸಿ ನಿನ್ನ ಬದಿಗೇ ಇನ್ನೊಂಚೂರು ಸರಿದು ಅಲುಗಾಡದೆ ಮಲಗಿದ್ದೇನೆ. ನೀನೂ ಮಲಗಿದ್ದೀಯ ಅಲುಗಾಡದೆ, ಬದಿಗೆ ಸರಿಯದೆ. ಅತ್ತಿತ್ತ ಹೊರಳದೆ. ಅಲ್ಲಿಗೆ ಎಚ್ಚರದ ಆಟ ಮುಗಿಯಿತು.
ಇನ್ನೊಂಚೂರು ಬದಿಗೆ ಸರಿವ ಆಸೆ, ಸೋಕಿಸಿಕೊಳ್ಳುವ ಬಯಕೆಗಣ್ಣಿಗೆ ನಿದ್ದೆ ಬಂದು ಈಗ ಕನಸಿನ ಜೋಕಾಲಿ, ಇದ ಜೀಕುವಾಗಲೂ ಸೋಕದ ಹಾಗೆ ಎಚ್ಚರದಿ ತೂಗುವವನಲ್ಲ ಇವನೇ ಆ ನಲ್ಲ?! ಇಲ್ಲಿಗೆ ಕನಸು ಕೊನೆಯಾಯಿತು.
ಬೆಳಗ್ಗೆ ನಿದ್ದೆಗಣ್ಣಿನ ಅಲಾರ್ಮ್ ಕೂಗುವಾಗ ನಾನೇಳದೆ ನೀನು ಮೇಲಿನಿಂದ ಕೈಸಾರಿ ಆಫ್ ಮಾಡುವಾಗ ಅದು ಹ್ಯಾಗೋ ಒಂಚೂರು ಕೈ ಸೋಕಿ ನನ್ನ ನಿದ್ದೆ ಪೂರ್ತಿ ಎಚ್ಚರಗೊಂಡರೆ ನೀನು ಸಾ--ರಿ ಗೊಣಗುತ್ತಾ ಸಣ್ಣಗೆ ಗೊರಕೆ ಹೊಡೆಯುತ್ತಿದ್ದೀ. ಅಲ್ಲಿಗೆ ಮತ್ತೊಂದು ಕನಸು ಬಯಕೆಗಳ ನಿರೀಕ್ಷೆಯ ಎಚ್ಚರದ ಬೆಳಕು ಹರಿಯಿತು.
ಇಡೀ ದಿನವನ್ನ ಎಲ್ಲ ಕೆಲಸಗಳ ಓಣಿಯಲ್ಲಿ ಹರಿದಾಡಿಸಿ, ಅಷ್ಟಿಷ್ಟು ಬಿಡುವಲ್ಲಿ ಇನ್ಯಾರದೋ ಕನಸು ಬಯಕೆಗಳ ಓದಿಕೊಂಡು ಮನೆಯಿಡೀ ನಲಿವ ಸಗ್ಗದ ನಲಿವೊಂದನ್ನು ಸಾಕುತ್ತಾ, ಮತ್ತೆ ಕಾಯುತ್ತಿದ್ದೇನೆ ಇರುಳಿಗೆ - ಗಾಜಿನ ಚಪ್ಪಲಿ ತೊಟ್ಟು ಚುಕ್ಕಿಗಳಂಗಿ ತೊಟ್ಟು ಮಾಯಾವಿ ರಥದಲ್ಲಿ ಹೋಗುವ ಕನಸಿನಿರುಳು ಇಂದಿರಬಹುದೇ ಎಂದು.

ಹಾರಗುದುರಿ ಬೆನ್ನನೇರಿ ಮಲ್ಲಿಗೆ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತ ಹಾಗೆ ನೆನಪು. ಲಾಲಲಾ ಅಂತ ಫ್ರಾಕನ್ನೆತ್ತಿ ಸಿಂಡ್ರೆಲಾ ನೃತ್ಯ ನಟಿಸುವ ಮಗಳ ಒನಪು. ನೆನಪಿಗೆ ಕೂತ ಧೂಳು ಹೆಚ್ಚಾಗಿ ನಿನಗೆ ಅಲರ್ಜಿ ನೆಗಡಿ. ಸುತ್ತ ಅಮೃತಾಂಜನದ ಘಾಟು ವಾಸನೆ. ಓಹ್ ಅಲ್ಲೇಳುತ್ತಿದೆ ಕನಸಿನಾವಿಯ ಉಂಗುರ. ಅಮ್ಮ ಧರಿಸುವುದು ಥರವೇ ಹುಡುಗು ದಿನಗಳ ಕನಸು ಕಂಗಳ ಅಂತ ಕೇಳುತ್ತಾ.. ಓಡುವ ದಿನದ ಬೈಕು ಹತ್ತುವ ಅಪ್ಪ ಬರುವ ರಾತ್ರಿಗೆ ಮತ್ತೆ ಬೇಡ ಬೇಡೆಂದರೂ ಕನಸಿನ ಫಾಸ್ಟ್ ಟ್ರ್ಯಾಕ್ ಲೆನ್ಸು!

ಮಲಗಿದ್ದೇನೆ ಛಾವಣಿಯನ್ನು ದಿಟ್ಟಿಸುತ್ತಾ..
ಅಲ್ಲೇನಿದೆ? ಏನಿಲ್ಲ?
ಹಗಲಿರುಳ ಜೀಕುಜೀವನದ ಛಾಯಾಕನ್ನಡಿ!

Friday, November 23, 2012

ಮುಗಿಲ ಹೊಳವು!

ಕಲಕಿ ಹೋಗಿರುವ
ಮನದಿ ಸುಮ್ಮನೆ
ಕತ್ತು ಮೇಲಕ್ಕೆತ್ತಿ ನೋಡಿದೆ
ಚಳಿಗಾಲದ ನೀಲಿ ಆಕಾಶ-ದ
ತುಂಬೆಲ್ಲ ಓಡುವ ಬಿಳಿ ಬಿಳಿ ಮೋಡ
ಬದುಕಿನ ಋತುವೂ ಹೀಗೆ ಅಲ್ಲವೆ?
ಮೋಡ ಕವಿದಂತೆ
ಕೆಲವು ಮಳೆತುಂಬಿ,
ಇನ್ಕೆಲವು ಹೊಗೆತುಂಬಿ
ಕೆಲವಷ್ಟು ಓಡುತ್ತಾ ನೆರಳೂಡಿ
ಮುಂದಿನೂರಲ್ಲಿ ಮಳೆಸುರಿಸುವುವು
ಕೆಲವಂತೂ ದಿನವಿಡೀ
ರಗಳೆ ಹಚ್ಚಿ ಕವಿದು ಕೂತು
ಸುರಿಯದೇ, ಸುಮ್ಮನೂ ಇರದೆ
ಧಗೆ ಹಚ್ಚಿ ಹೋಗುವವು
ಇನ್ನಷ್ಟು ಕಾಳಿದಾಸನ
ಉಜ್ಜಯಿನಿಯಿಂದಲೇ ಬಂದ ಹಾಗೆ
ಕಾವ್ಯವರ್ಷಿಣೀ
ನವಿಲಿಗೇ ನಲಿವು ಕೊಡುವ ಹಾಗೆ
ಗರಿಬಿಚ್ಚುವ ಹಾಗೆ ಹುರಿದುಂಬಿಸಿದವೆಷ್ಟೋ
ಕಾದು ಕೂತು ಕೆಂಪಾದ ರೈತನ
ಮಡಿಲಿಗೆ ತಂಪು ಸುರಿದವೆಷ್ಟೋ
ಅರ್ಧ ರಾತ್ರಿಗೆದ್ದು
ಗದ್ದೆ ಬದು ಸರಿ ಮಾಡಲು ಹೊರಡಿಸಿದವೆಷ್ಟೋ..

ಇಲ್ಲಿ ಸುಮ್ಮನೆ ಕಲಕಿ ಹೋದ
ಮನಸ್ಸಿಗೆ ಅನಿಸುತ್ತದೆ
ಘಟನೆಗಳು ಘಟಿಸುವುದು
ಬದುಕಿನ ಅನಂತ ಅವಕಾಶದಲ್ಲಿ
ಮೋಡಗಳ ಹಾಗೆ.
ಈ ಕ್ಷಣ ಖಾಲಿ
ಮತ್ತೆ ತುಂಬಿದ ಮೋಡಗಳ ಹಾಗೆ
ಏನೆಲ್ಲ ನಡೆಸಿಯೂ ಮುಂದೋಡುವ ಹಾಗೆ.
ತಡೆಯಲಾರದ ಹಾಗೆ
ಬಯಸಿದ್ದೆ ನಡೆಯಲಾರದ ಹಾಗೆ
ಅನಿರೀಕ್ಷಿತ ಮೋಡದಲ್ಲೊಂದು
ನಿರೀಕ್ಷಿತ ಸತ್ಯದ ಹನಿ ಬಚ್ಚಿಟ್ಟುಕೊಂಡ ಹಾಗೆ.
ಕವಿಗೆ ಕಂಡ ನೀಲಿ ಮುಗಿಲು
ಕಪ್ಪಾಗಿ ಕವಿದ ಹಾಗೆ.

Friday, October 5, 2012

ರೂಪಾಂತರ

ಕೈಯಲ್ಲಿ
ಹೂಗೊಂಚಲು ಹಿಡಿದ
ಹೂಮೊಗವ
ತುಂಬಿದ ನೆರಳು
ನನಗೆ ಗೊತ್ತು.
ತುಂಟತನದಲ್ಲಿ
ಅದ್ದಿ ತೆಗೆದ ಮೂರ್ತಿಯ
ಕಣ್ಣಿನಲ್ಲಿ ಪ್ರತಿಫಲಿಸುವ
ಅಭದ್ರತೆಯ ಭಾವವೂ ಗೊತ್ತು.

ಹಿಡಿದು ಎರಡು ತಟ್ಟಬೇಕೆನ್ನಿಸುವಷ್ಟು
ಸಿಟ್ಟು ಬಂದರೂ
ಸುಮ್ಮನೆ ತಬ್ಬಿಕೊಳ್ಳುತ್ತೇನೆ.
ಬಯ್ಗುಳವ ಬಂದ ದಾರಿಯಲ್ಲೆ
ವಾಪಸ್ ಕಳಿಸಿ
ಆ ಬಾಯಲ್ಲೆ ನಿನ್ನ ಕೆನ್ನೆಗೆ
ಮತ್ತೊಂದು ಮುತ್ತಿಡುತ್ತೇನೆ.

ತಮ್ಮನ ಕೆನ್ನೆ ಚಿವುಟಲು
ಹೋಗಿ
ಮೆತ್ತಗೆ ಸವರುವ
ಆ ಸಿರಿಕರಗಳಿಗೆ
ಕರುಣಾರವಿಂದಗಳಿಗೆ
ನನ್ನ ತಲೆಯಿಡುತ್ತೇನೆ.

ಬಾಲ್ಯಕ್ಕೆ
ಸ್ವಲ್ಪ ಇರಿಸುಮುರಿಸಾದರೂ
ನಿನ್ನ ಬದುಕಿಡೀ
ಜೊತೆಯಾಗುವ
ಈ ಜೀವ ನಿನಗೆ
ತುಂಬ ಇಷ್ಟವಾಗತ್ತೆ
ಅಂತ ಗೊತ್ತು.
ನನಗೊಬ್ಬ
ತಮ್ಮನಿರುವ
ನಿರಾಳ
ನನಗಷ್ಟೇ ಗೊತ್ತು.

ಚಂದಚಿಟ್ಟೆಗೂ
ಮೊದಲು
ಕಂಬಳಿಹುಳು
ರಾತ್ರಿಯ ಒಡಲಲ್ಲೇ
ಬೆಳಕಿನ ಬೀಜ.

Wednesday, May 30, 2012

ಅರಿವು

ನೀನು
ಭ್ರಮೆಗಳ ಸಿಪ್ಪೆಗಳನ್ನೆಲ್ಲಾ
ಒಂದೊಂದಾಗಿ ಸುಲಿದುಬಿಟ್ಟೆ.
ಈಗ ನೋಡು
ಹಣ್ಣಾಗದ,
ರುಚಿಹಿಡಿಸದ
ಸತ್ಯವೆಂಬೋ ಕಾಯಿ 
ಇನ್ನೆಂದೂ ಹಣ್ಣಾಗುವುದೂ ಇಲ್ಲ!
ಒಂದಿಷ್ಟು ಭ್ರಮೆಯ
ಆವರಣ ಹಾಗೆ ಇದ್ದಿದ್ದರೆ
ಕನಸು ನಿರೀಕ್ಷೆಗಳ
ಧೂಪವಿಟ್ಟು
ಹಣ್ಣಾಗಿಸಬಹುದಿತ್ತೇನೋ
ಎಂಬ ಆಸೆಯ
ತಲೆಯ ಮೇಲೆ
ರಪ್ಪನೆ ಹೊಡೆಯುತ್ತದೆ
ಹೂವು ಹಣ್ಣು ಸಹಜವಾಗಿ
ಆಗಬೇಕು
ಒತ್ತೆಹಾಕಿ ಅಲ್ಲ ಎಂಬ
ನನ್ನ-ನಿನ್ನ ನಂಬಿಕೆ.
ಉಹ್
ನಹಿ ಜ್ಞಾನೇನ ಸದೃಶಂ!
ಅರಿವಿಗೆ ಹಾತೊರೆಯುವಾಗ
ಕಣ್ಣು ಕುಕ್ಕುವ ಬೆಳಕು
ಮತ್ತು ಕುರುಡುತನ
ಎರಡಕ್ಕೂ
ತಯಾರಿರಬೇಕು.
and some times...
ಪ್ರೀತಿ ಅರಿವಿನ
ಇನ್ನೊಂದು ರೂಪ!

Friday, March 30, 2012

ಸಂಧ್ಯಾ ರಾಗ..

ಮುದ್ದಿಸಿ ಲಾಲಿಸಿ
ನೇರ ನಿಂತ ಬೆನ್ತಟ್ಟಿ
ಸೆರಗನ್ನು ಉತ್ತರೀಯಕ್ಕೆ ಗಂಟು ಕಟ್ಟಿ
ಹಾಲು - ನೀರು ಧಾರೆಯೆರೆದು
ಕೊಟ್ಟದ್ದೊಂದು ಉದ್ದ ಹಳಿ,
ಕಟ್ಟಿದ ಗಂಟಿನೊಂದಿಗೇ
ಸೆಳೆದುಕೊಂಡು, ಪಕ್ಕಕೆ ನಿಂದು
ಬೆನ್ನು ಸವರಿ,
ಒಳಸೇರಿಸಿಕೊಂಡ ಹಾಗೆ
ಅನಿಸುವಂತೆ ಮಾಡಿದ್ದೊಂದು
ಉದ್ದ ಹಳಿ,
ಎರಡರ ಮಧ್ಯದಲ್ಲಿ
ಎಷ್ಟೊಂದು ಕೂಡುಕೊಳೆ
ಸೇರಿಸುವ ಪುಟ್ಟ ಪುಟ್ಟ ಕಂಬಿ
ಅಂಕು ಡೊಂಕಾಗಿ
ಹರಿವ ಪಯಣದ
ಉದ್ದ ಕಾಯುವ ಸಮಾನಾಂತರ ರೇಖೆಗಳು
ಈ ಪಯಣವ ಹೊತ್ತ
ಭುವಿಗೇನು ದಕ್ಕಿದ್ದು?
ದಿನದಿನದ ಧಡಭಡ ಪಯಣ
ವೇಳಾಪಟ್ಟಿಯ ನಿಭಾಯಿಸುವ
ನಿಲ್ದಾಣ
ಹತ್ತಿಳಿವವರ ಅನುರಣನ.

ಮುದ್ದು ಮಗುವಿರುವಳಲ್ಲ
ಎಂದಿರೋ
ಇಲ್ಲ ಅದು ಹಾಗಲ್ಲ
ಅಮ್ಮನಿಲ್ಲದೆ ಇರುವವಳಲ್ಲ.
ಯಾಕೆ ಕೊಡಬೇಕು
ಹೆತ್ತ ಹೊಟ್ಟೆಗೆ ಸಂಕಟ??
ಹೆರಿಸುವ ಪುರುಷಾರ್ಥಕ್ಕೆ ಧರ್ಮಸಂಕಟ?

ಪೊರೆದು ತೊರೆದ ಊರಿನ ನೆನಪು
ಗಾಢವಾಗಿ ಒತ್ತಿ ಕಾಡುತ್ತವೆ
ಆದರೇನು ಮಾಡಲಿ
ಹೊಕ್ಕ ಊರಿನ
ಪ್ರಭಾವಳಿ ಮೀರಲಾರೆ
ಇಲ್ಲಿರಲಾರೆ
ಅಲ್ಲಿಗೆ ಹೋಗಲಾರೆ
ಹೋದರೆ ಎದೆಗವಚಿಕೊಳ್ಳುವ
ಮನೆಯ ಮರುಕದ ಭಾರ ಹೊರಲಾರೆ
ಹೊನ್ನಮ್ಮನೋ ಚೆನ್ನಮ್ಮನೋ
ಎಲ್ಲರನ್ನೂ ಪೊರೆದು, ಕೊರೆದು, ತೊರೆದ
ಗಂಡುಮೆಟ್ಟಿನ ನೆಲದ ಸಂಸ್ಕೃತಿಯೇ
ಹೇಗೆ ಬಿಡಲಿ ನನ್ನ
ಮುದ್ದು ಮಗಳನ್ನ ನಿನ್ನ ಆರೈಕೆಗೆ?!

ಅದೋ
ಸಂಜೆಗತ್ತಲಲ್ಲಿ
ನಿಲ್ದಾಣದಿಂದಾಚೆ
ಬೆಳಕು ಬೀಳದ ದೂರದಲಿ
ಹೆತ್ತ ಮಗುವ
ಬಿಗಿದಿದ್ದೇನೆ ಹೊಟ್ಟೆಗೆ
ಕೂಗು ಹೊರಬರದಿರಲೆಂದು
ಕರ್ಚೀಫು ತುರುಕಿದ್ದೇನೆ,
ಉಕ್ಕಿ ಬರುವ ದುಃಖಕ್ಕೆ
ಅಸಹಾಯ ರೋಷದ ಆಸರೆಯಿಟ್ಟು
ನಿಂತಿದ್ದೇನೆ-
ಕೂಡಿ ಕಳೆವ
ಕಂಬಿಗಳ ಬಳಸಿದ
ಸಮದೂರದ ಹಳಿಗಳ ಮೇಲೆ
ಧಡಬಡ ಸದ್ದು..
ಆಹ್ ಇಲ್ಲೆ
ರಭಸದ ಬೆಳಕು ಶಬ್ಧ
ಅಸಹನೀಯ ನೋವು
ಮುಗಿದ ಕತೆ
ನಿಶ್ಯಬ್ಧ ನಿರಾಳ.

ಕೆಂಪು ಕರಗಿದ ಸಂಜೆ ಮುಗಿದು
ಚುಕ್ಕಿಯೂ ಮಿನುಗದ ರಾತ್ರಿಯಿಡೀ
ಧಾರಾಕಾರ ಮಳೆ
ಬೆಳಿಗ್ಗೆ
ಅಳಿದುಳಿದ ಚೂರುಪಾರಿಗೆ
ಶವಸಂಸ್ಕಾರ.

Thursday, March 22, 2012

ಲೆಕ್ಕಕ್ಕುಂಟು ಆಟಕ್ಕಿಲ್ಲ...

ನೀನು ಲೆಕ್ಕಕ್ಕೆ
ನಾನು ಆಟಕ್ಕೆ
ಔಟಾದರೂ, ಗೆದ್ದರೂ
ಆಟ ನಿಂತರೂ ನಡೆದರೂ
ನನಗೇ ಬಿಟ್ಟ
ಕುಂಟೇಬಿಲ್ಲೆ
ಕಾಣದ ಹಾಗೆ
ಕಟ್ಟಿಕೊಂಡ ಎಲ್ಲೆ.

ಕಾಲಿದ್ದೂ ಕುಂಟುವ
ನೋವು
ಆಡಿದವರಿಗೇ ಗೊತ್ತು,
ಬಿಲ್ಲೆ ಇಲ್ಲದೆ ದೂಡುವ
ಹೆಜ್ಜೆ ಭಾರ ಭಾರ ಇತ್ತು,
ಒಂದು ಮಾತು
ಹ್ಯಾಗಿದೀ ಅಂತ ಕೇಳಿದ್ದರೂ
ಸಾಕಿತ್ತು.
ಮಾತು ಬಿಟ್ ಹಾಕು
ಆದರೆ ಎಲ್ಲಿ ??
ಆ -
ಕೈಯೊತ್ತು,
ಕಣ್ಣು ಕಣ್ಣು ಕಲೆವ ಹೊತ್ತು,
ಕವಿದ ಕತ್ತಲಲ್ಲೆ ಹೊಳೆವ
ಬಾನ್ಮುತ್ತು...?!

ಯಾವುದೋ ಆಟ
ಇನ್ಯಾವುದೋ ಲೆಕ್ಕ
ಕನಸು ಬೀಳುವ ಕಣ್ಣಲಿ
ಕಸ ಬಿದ್ದು
ಧಾರೆ ಧಾರೆ ಮುತ್ತು.

Wednesday, March 7, 2012

ಆ ಮೇಲೆ..

ಔಟ್ ಆಫ್ ದಿ ಡೇ ಅಂಡ್ ನೈಟ್, ಅ ಜಾಯ್ ಹ್ಯಾಸ್ ಟೇಕನ್ ಫ್ಲೈಟ್.. - ಪಿ.ಬಿ.ಶೆಲ್ಲಿ

ಮೊಗ್ಗು ಅರಳಿದ ಮೇಲೆ
ಗಂಧ ಗಾಳಿಯ ಪಾಲು
ಮೇಲೆಸೀ ಕಲ್ಲು,
ಬಿದ್ದರೂ ಕೆಳಗೆ ಪರ್ವಾಗಿಲ್ಲ
ಅಂದು ಹಾರಿಸಿಕೊಂಡು
ಗಾಳಿಯಲಿ ತೇಲಿದ
ನಲವಿನ ಬಳ್ಳಿಯೇ
ಈಗ ಬಿದ್ದ ನೋವಿಗೆ
ಯಾಕೆ ಅಳು?
ಕೆಳಗೆ ವಾಪಸಾಗಿದ್ದು ಕಲ್ಲು ಮಾತ್ರ
ಖುಶಿ ಗುರುತ್ವ ಕಳೆದು ಹಾರಿ ಹೋಗಿತ್ತು.
ಕಾಲನ ಹೆಸರು
ಯಾಕೆ ಕಾಲ
ಅಂತ ಗೊತ್ತಾದ ಹೊತ್ತು
ದೀಪದುರಿಯ ಕಣ್ಣಿನ ಒಡಲ
ತುಂಬ ಬಿಳಿ ಬಿಳಿ ಮುತ್ತು.
ಹೂವಾದ ಮೊಗ್ಗು
ಒಣಗಿ ಕುಸುಮಗಳುದುರಿ
ತೊಟ್ಟು ಕಳಚಲೆಷ್ಟು ಹೊತ್ತು!
ಕಿನಾರೆಯ ಮರಳ ಒಡಲು
ಇರುವುದೇ
ನಾವೆ ಹತ್ತಿ - ಇಳಿದು ಬೇರೆಡೆಗೆ ಹೋಗಲು
ಅಲ್ಲವಿದು ಮನೆಯ ಮಾಡಲು
ಕಾಲನ ಹೆಸರು ಯಾಕೆ ಕಾಲ ಅಂತ ಗೊತ್ತಾದ ಹೊತ್ತು..
ಎಂದೂ ಕಾಣದ ಕನಸಿನ ತುಂಬ ಅತ್ತು
ಕಂಪು ಬೀರದ ಕವಿತೆಯ ಹೆತ್ತು
ಕರಗುತಿಹ ಜೀವ ಕಳೆದಲ್ಲೇ ಹುಡುಕಿತ್ತು.
ಆಮೇಲೆ..
ಆಮೇಲಾಮೇಲೆ..
ಕಪ್ಪುನೀಲಿ ಬಾನ ಎದೆಯಲಿ ಬರೀ ಚುಕ್ಕಿ ಚುಕ್ಕಿ ಇತ್ತು.

Friday, March 2, 2012

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು...

ಒಂದು ಹಣ್ಣಣ್ಣು ಕೈ ಯನ್ನು ಜಗ್ಗಿ ಹಿಡಿದ ಪುಟ್ಟ ಕೈ, ಬಿಳೀ ಬಟ್ಟೆಗೆ ಬಣ್ ಬಣ್ಣದ ಕರವಸ್ತ್ರದ ಹಾಗೆ, ಅಗೋ ಅಲ್ಲಿ ಹಸಿರು ಕೆಂಪುಗುಡ್ಡದ ಬಳಸು ಹಾದಿಯಲ್ಲಿ ಬಿಳಿ ಖದ್ದರ್ ಅಜ್ಜನ ಉಸ್ ಗುಡುವಿಕೆಗೆ ಸುಯ್ ಗುಡುತ್ತಾ ಬಣ್ಣಾಡಗಿತ್ತಿ ಮೊಮ್ಮಗಳು

ಎಲ್ ಹೋಗುತ್ತಿದ್ದಾರೆ? ಇಲ್ಲೆ ಎಲ್ಲೋ ಹೀಗೇ ದರೆ ಹತ್ತಿ ಇಳಿದು, ತೋಟದ ಬದಿಗೆ, ಹಳ್ಳದಂಚಿಗೆ, ಕಾಡುಗುಡ್ಡದಲ್ಲಿ ಒಂದು ಓಡಾಟ, ಮಾತು ಸೋಲುವ ಒಡನಾಟ. ಅಷ್ಟೇಯೇ ಇಲ್ಲ ದಾರಿ ಸಾಗಲು ಕಟ್ಟಿದ ಕತೆಗಳು ಕರೆದೊಯ್ವ ಊರುಗಳ ಹೆಸರು ಹಳೇ ಪುರಾಣದ ಓಲೆಗರಿಗಳಲ್ಲಿ ಸಿಗಬಹುದೇನೋ, ಆ ಕತೆಗಳೊಳಗೆ ಆಡುವವರು ಇಲ್ಲೆ ಮರಸಾಲುಗಳ ನೆರಳಲ್ಲೆ ಮರ್ಮರಗುಡುತ್ತಾ, ಪುಟ್ಟ ತಲೆಯಲ್ಲೊಂದು ಅಗಾಧ ಮಾಯಾಲೋಕ. ಅಜ್ಜ ಬಿಡುವುದೇ ಇಲ್ಲ. ಕೀಲಿ ಕೊಡುತ್ತಲೇ ಇರುವನು ಆ ಮಾಯಾಕುದುರೆಗೆ.
ರೆಕ್ಕೆಗಳಿವೆಯೋ ಹಾಗಾದ್ರೆ, ಇದೆಯೋ ಇಲ್ವೋ ಯಾರಿಗೆ ಬೇಕು. ಹಾರುವುದಷ್ಟೆ ನಮಗೆ ಬೇಕು. ಏಳು ಸಮುದ್ರ, ದೊಡ್ಡ ಕಾನು, ಸೌಗಂಧಿಕಾ ಪುಷ್ಪ, ಸ್ವರ್ಗದ ಗಡಿ, ಗಂಧರ್ವರ ಸೀಮೆ, ಐರಾವತ ಇಳಿದು ಬಂದ ಕಣಿವೆ, ಕಣ್ವಾಶ್ರಮ, ಕಾಳಿದಾಸನ ಉಜ್ಜಯಿನಿ,ಕನಕ ಲಂಕೆ,ಕಿಷ್ಕಿಂಧೆ,ಚಿತ್ರಕೂಟ,ಪಂಚವಟಿ, ಶಬರಿಯ ಮನೆಯಿದ್ದ ಬೆಟ್ಟದೂರು, ಗುಹನ ದೋಣಿ ತೇಲುವ ಸರಯೂ, ಮಂಥರೆಯ ಸುಟ್ಟು ಕೊಲ್ಲುವ ಕಾಳ್ಗಿಚ್ಚು ನಂದಿದ ಕಾಡು, ಹೊಂಚಿ ಕುಳಿತ ಅಭಿಲಾಷೆ, ಸ್ತ್ರೀ ಸಹಜ ಆಸೆ, ರೆಕ್ಕೆ ಮುರಿದ ಜಟಾಯು, ವಾಲಿಯ ಕಣ್ಣಾಲಿಯಲಿ ತೊನೆಯುವ ಪರ್ವತಶ್ರೇಣಿ, ಮರೆಯಲಿ ನಿಂತ ಕೆಚ್ಚು, ನೀನೆ ಹನುಮಂತನೆಂಬ ಎಚ್ಚರಿಕೆಯ ಮಾತು ಕೇಳಿಸಿದ ಕಡಲಂಚಿನ ಕಲ್ಲು, ಮೂರು ಗೆರೆಯೆಳೆಸಿಕೊಂಡ ಅಳಿಲು, ಭ್ರಮೆ ಹುಟ್ಟಿಸುವ ಮಂಡೋದರಿ, ನಮ್ರ ವಿಭೀಷಣ, ಘೋರ ಯುದ್ದ, ಕಷ್ಟ ಸಾಧ್ಯ ಸಂಜೀವಿನಿ, ಗೆಲುವಿನ ಹೊಸ್ತಿಲಲ್ಲಿ ಹಚ್ಚಿದ ಅಗ್ನಿದಿವ್ಯ, ಪುಷ್ಪಕವಿಮಾನದಲ್ಲಿ ಮನೆಕಡೆ ಸವಾರಿ, ಕಾದ ಕಣ್ಣುಗಳ ಭರತ, ವಿಜಯೋತ್ಸವದ ನಗರಿ, ಕೊಂಕುಮಾತಿನ ಅಗಸ, ಪ್ರಜಾಪ್ರೇಮಿ ರಾಜಾರಾಮ, ವನವಿಹಾರ, ಬೇಕೆಂದೆ ಕಳೆದುಕೊಳ್ಳುವ ಸೀತೆ, ಋಷಿಮನೆಯಲ್ಲಿ ಜನ್ಮೋತ್ಸವ, ಮಕ್ಕಳುಲಿ ಕೇಳಿ ಮಾತು ಮರೆವ ಅಮ್ಮನ ದಿನಗಳು,... ಅಶ್ವಮೇಧದ ಸ್ವರ್ಣಸೀತೆ, ಕರ್ತವ್ಯ ಮತ್ತು ಒಲವಿನ ಮುಖಾಮುಖಿಯಲ್ಲಿ ಆಲ್ ಅಕಾಮಡೇಟಿವ್ ಒಲವು ಬೆನ್ನು ತಿರುಗಿಸಿ ಅಮ್ಮನ ಒಡಲು ಹೊಕ್ಕಲ್ಲಿಯವರೆಗೆ, ಇಷ್ಟೇ ಅಷ್ಟೇ ಅನ್ನದೆ ದಿನದ ಕಣ್ಣು ಮುಚ್ಚುವವರೆಗೆ ರಾತ್ರಿಯ ತೆಕ್ಕೆ ಮಗ್ಗುಲಾಗುವವರೆಗೆ ಹೇಳಿದ ಕಥೆಗಳು, ಕಂಡ ನೋಟಗಳು, ಹೊಳೆಯದ ಅರ್ಥಗಳು, ನೋಟಗಳಾಚೆಗಿನ ಚಿತ್ರಗಳು - ಇಲ್ಲಿ ಬಿಳಿ ಬಟ್ಟೆಯೊಳಗಣ ಹಣ್ಣಣ್ಣು ಕೈ ಹಿಡಿದ ಬಣ್ಣ ಬಣ್ಣದ ಅಂಗಿಯೊಳಗಿನ ಚಿಗುರು ಬೆರಳು.
ಕಥೆಗಳ ಬರೆಯುವ ಕಥೆಗಾರ.. ನಿನ್ನ ಮಹಿಮೆ ಅಪಾರ ಎಂದಿದ್ದರು ಪುತಿನ. ಅದು ನಿಜವೇ. ಆದರೆ ಮಾಡುವವನದಲ್ಲ ಹಾಡು ಹಾಡುವವನದು ಅನ್ನುವುದು ಅದಕ್ಕಿಂತ ಗಟ್ಟಿಯಾಗಿ ಹೊಳೆದ ನಿಜ. ಅದನ್ನಂದವರೂ ಅವರೆ. ಕಥೆ ಹೇಳುವವನೊಬ್ಬ, ಚೆಂದಕೆ ಕಥೆ ಹೇಳುವವನೊಬ್ಬ ಬಾಲ್ಯಕ್ಕೆ ದಕ್ಕದಿದ್ದರೆ, ಕಥೆಯ ಕಥೆ, ಕಥೆಗಾರಿಕೆಯ ಕಥೆ ಮುಗಿದ ಹಾಗೆ ಅಲ್ಲವೆ?


ನಿನ್ನ ಯಾತ್ರೆ ಮುಗಿಸಿದೆ ಅಂತ ಅಮ್ಮ ಫೋನು ಮಾಡಿದಾಗ, ಕಳೆದು ಹೋದೆ ನೀನು ಅಂದುಕೊಂಡಿದ್ದೆ ನಾನು. ಇಲ್ಲ. ಇಲ್ಲೆ ಇದ್ದೀಯಲ್ಲ ಕಣ್ಮುಚ್ಚಿ ಕಥೆಯ ನೆನೆದರೆ ನಾನು ಓದಿದ ಕತೆಗಳನ್ನೆಲ್ಲ ಕೈಹಿಡಿದು ನಡೆಸುವ ನೀನೇ ಸಿಗುತ್ತೀ.ಈಗ ಇಲ್ಲಿ ಮೊಳಕೆಯೊಡೆದಿರುವ ಚಿಗುರಿಗೆ ಎರೆಯಲು ನೂರು ಕತೆಗಳ ರಂಗು ರಂಗಿನ ಜೀವ ಜಲ. ಹೌದು ನಿನ್ನ ಬಟ್ಟೆ ಮಾತ್ರ ಬಿಳೀಗಿತ್ತು.ಓದು ಓದು, ಇನ್ನೂ ಓದು ಅಂದ ಮಾತು ನೆನಪಿನಲಿ ಯಾವತ್ತೂ. ದಶರಥನ ಸಮೀಕರಣದಲ್ಲಿ ನೀನು ನೊಂದ ದಿನಗಳ ನೆನಪು ನನಗೆ. ನೀನು ಹಾಗಂದ ಕೂಡಲೆ, ನಾನೇನು ಕೈಕೆಯಾ ಹಂಗರೆ ಅಂತ ಸಿಟ್ಮಾಡಿದ ಅಮ್ಮಮ್ಮನೂ. ಅಲ್ಲ ಅವಳಿಗ್ಯಾಕೆ ತಾನು ಕೌಸಲ್ಯೆ ಎನಿಸುವುದಿಲ್ಲ ಅಂತ ಅವತ್ತು ಅಚ್ಚರಿಪಟ್ಟು, ಅದನ್ನೇ ಕೇಳಿ ಬೈಸಿಕೊಂಡ ನೆನಪೂ. ಕೆ.ಎಸ್.ನ ಬರೆದಿದ್ದರು - ಜಾತಕಗಳೊಪ್ಪಿದರೆ ಮದುವೆಯೇ.ಅಲ್ಲವೇ? ಹೌದೇ?


ಏನೆಲ್ಲ ಹಾರಾಡಿಯೂ ನಿನ್ನ ಜರ್ಝರಿತ ಕೊನೆದಿನಗಳ ನೊಗ ಹೊತ್ತವಳು ಅವಳೇ ಅಲ್ಲವೇ? ನೀನು ಕಣ್ಮರೆಯಾದ ಮೇಲೆ, ಅಂದಿನ ನಿನ್ನನ್ನು ಅಕ್ಷರಶಃ ನೆನಪುಗಳಲ್ಲಿ ಮಾತಿನಲ್ಲಿ ಕಣ್ಣ ಮುಂದೆ ತರುತ್ತಿದ್ದವಳು. ಅವಳು ಹೋದ ಮೇಲೆ ನಿನ್ನ ಯಾರು ನೆನಪಿಟ್ಟುಕೊಂಡಿದಾರೆ ಅಂತ ಕೇಳಬೇಡ. ಇದ್ದೀವಿ ನಾವಿಬ್ಬರು - ಅಕ್ಕ,ತಮ್ಮ. ನಿನ್ನ ಅಮೃತವುಂಡವರು, ಬೆನ್ನು ನುಗ್ಗಾಗಿಸಿದವರು, ಬೆರಳು ಜಗ್ಗಿದವರು, ನಿನ್ನ ಕಥೆಗಳಿಗೆ ಕಿವಿಯಾದವರು, ಪೊರೆ ಬಂದ ಕಣ್ಣುಗಳಿಗೆ ಓದಿ ಹೇಳಿದವರು, ಸ್ಕೋರು ಕಾಣಿಸದ ಕಣ್ಣಿಗೆ ಅಂಗಳದ ಮಾಹಿತಿ ಕೊಟ್ಟವರು, ನೆನಪು ಮಾಡಿಕೊಂಡರೆ ಕಣ್ಣು ತುಂಬಿಸಿಕೊಳ್ಳುವವರು, ಅದನ್ನೇ ಹೇಳಲು ಹೋದೆ.

ನನ್ನ ಪುಟ್ಟ ಮಗಳಿಗೆ ಗೊತ್ತು. ತನ್ನಮ್ಮನಿಗೆ ಇಷ್ಟು ಹೇರಾಳ ಕತೆ ಹೇಳಿದವನೊಬ್ಬನಿದ್ದ ಅಜ್ಜ ಅಂತ. ನೀನಿರುತ್ತೀ ನಾನು ಹೋದರೂ ಅವಳ ನೆನಪುಗಳಲ್ಲಿ.ಅದೇ ಪುನರಾವರ್ತನೆ.

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು.

Wednesday, January 18, 2012

ದೀಪಕ ರಾಗ

ದೀಪು - ನನ್ನ ತಮ್ಮನ ಸ್ನೇಹಿತ. ನಮ್ಮ ಆತ್ಮೀಯ ಬಳಗ.
ಎಲ್ಲ ಸೌಕರ್ಯಗಳ ನಗರೀಕರಣದ ಬದುಕಲ್ಲಿ ಯಾವಾಗಲೂ ಹಳ್ಳಿಯೂರಿನ ನೆನಪಿನ ನಾವೆಯಲ್ಲಿ ತೇಲಿಹೋಗುವ ನನಗೆ ದೀಪು ಈ ಅಂತರಾಳದ ಮಾಸ್ಟರ್ ಕಾಪಿ ಸೀಡಿ ಕೊಟ್ಟಾಗ ತುಂಬ ಖುಶಿಯಾಯ್ತು. ಇದು ದೀಪುನ ಮೊದಲ ಪ್ರಯತ್ನ. ಏನಾರೂ ಮಾಡ್ಬೇಕು ಅಕ್ಕಾ, ಸುಮ್ನೆ ಸಾಫ್ಟ್ವೇರ್ ಕೆಲ್ಸ ಮಾತ್ರ ಮಾಡ್ಕೊಂಡು ಸಾಕಾಗೋಗಿದೆ ಅಂತ ಈಗೊಂದು ವರ್ಷದ ಹಿಂದೆ ಅವನು ಅಂದಾಗ ನಾನು ನಕ್ಕಿದ್ದೆ. ಎಲ್ರಿಗೂ ಹಾಗೆ, ಆಮೇಲಾಮೇಲೆ ಅದೇ ಅಭ್ಯಾಸ ಆಗಿ ಸುಮ್ನಾಗ್ತಾರೆ ಅಂತ ಅಂದೂ ಇದ್ದೆ. ಅದಕ್ಕೆ ಅವನು ಇಲ್ಲಾ ಅಕ್ಕಾ, ನಾನು ಮ್ಯೂಸಿಕ್ಕಲ್ಲಿ ಏನಾರು ಮಾಡ್ಬೇಕು ನಮ್ಮ ಬದುಕು ತುಂಬಿಕೊಳ್ಳೋಕೆ ಬೇಕಾದಷ್ಟು ದಾರಿ ಇದ್ದೇ ಇರತ್ತೆ. ನಂಗೆ ಸಂಗೀತ.. ಅಂದಾಗ ನಂಗೆ ದೇಜಾ-ವೂ ಅನ್ಸಿದ್ದು ನಿಜ. ಎಳೇ ಕಣ್ಣಿನ ಕನಸುಗಳನ್ನ ಭಂಗಗೊಳಿಸುವ ಇಷ್ಟ ನಂಗೆ ಚೂರೂ ಇರಲಿಲ್ಲ.

ಅವನು ಗಿಟಾರ್ ಕಲಿಯುವುದು, ಕೀ ಬೋರ್ಡ್ ಕಲೀತಿರೋದು, ಈ ಮ್ಯೂಸಿಕ್ ಆಲ್ಬಂ ಮಾಡ್ಬೇಕಿದ್ರೆ ಏನೇನ್ ಮಾಡ್ಬೇಕು ಹೀಗೆಲ್ಲ ಹಂತಗಳಲ್ಲೂ ನನಗೆ ಒಂದೊಂದು ಅಪ್ ಡೇಟ್ ಸಿಗ್ತಾ ಇತ್ತು. ಈ ಕನಸುಗಳ ಹಾದಿಯ ಹೂ ಮೊಗ್ಗುಗಳ ಪರಿಚಯ ಸಿಕ್ಕಿದ್ದೇ ಆಗ ನಂಗೆ.
ನಮ್ಮೂರಿನ ಹುಡುಗ, ತಮ್ಮನ ಗೆಳೆಯ, ಎಳೆಯ ಚೈತನ್ಯ ಎಂಬೆಲ್ಲ ವಾತ್ಸಲ್ಯವನ್ನು ಮೀರಿದ ಒಂದು ಮೆಚ್ಚುಗೆ ನಂಗೆ ಅವನ ಮೇಲೆ.


ಥ್ಯಾಂಕ್ ಗಾಡ್ ಇಟ್ ಈಸ್ ಫ್ರೈಡೇ ಅಂತೇಳಿ ಸೊಂಟಕ್ಕೆ ಗೆಳತಿಯ ಕೈ ಸಿಕ್ಕಿಸಿಕೊಂಡು ರಾಜಧಾನಿಯ ರಸ್ತೆಗಳಲ್ಲಿ ಬೈಕು ಹತ್ತಿ ಹೊಗೆಯೆಬ್ಬಿಸುವ ಸಾಧ್ಯತೆಯ ಅಸಂಖ್ಯಾತ ಯುವಕರ ಮಧ್ಯೆ, ತನ್ನ ಸಂಜೆಗಳನ್ನ ತಾನು ಕಂಡ ಕನಸಿಗೆ, ತಾನು ಅನುಭವಿಸಬೇಕಿರುವ ಹುಚ್ಚಿಗೆ ಮೀಸಲಿಟ್ಟು, ಇವೆಲ್ಲದರ ನಡುವೆ ಗೆಳತಿಯ ಮಾತುಕತೆಗಿಷ್ಟು ಸಮಯ ಕೊಟ್ಟು ಏನೋ ಮಾಡಬೇಕು ಎಂಬಲ್ಲಿನ "ಬ್ಲಾಂಕ್ ಸ್ಪೇಸು"ಗಳಲ್ಲಿ ಸಂಗೀತದ ನೋಟುಗಳನ್ನ ತುಂಬಿಸುವುದು ನಿಜಕ್ಕೂ ವಿಶಿಷ್ಟ ಪ್ರಯತ್ನ.


ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ,ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದಟ್ಟ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನ ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನ ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನ ಮೆಚ್ಚಲೇಬೇಕು. ಅಭಿನಂದಿಸಲೇಬೇಕು.


ಇಷ್ಟಕ್ಕೂ ಇವನು ಮಾಡಿದ್ದು ಏನು?
ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು.
ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು,
ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು
ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು
ಸ್ಟುಡಿಯೋ,ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ,ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು.
ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನ ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು.

ಇಷ್ಟೇನಾ ಇದು ಸ್ವಲ್ಪ ಎಫರ್ಟ್ ಹಾಕಿದ್ರೆ ಎಲ್ರೂ ಮಾಡ್ಬೋದು ಅನ್ನಿಸಿದ್ರೂ.. ಒಂದು ನೆನಪಿರಲಿ.
ಅಸ್ಪಷ್ಟ ಕನಸೊಂದು ತೀವ್ರ ಹಪಾಹಪಿಯಾಗಿ ಪ್ರಾಮಾಣಿಕ ಪ್ರಯತ್ನವಾಗಿ ಹಿಡಿದ ಗುರಿಯಾಗಿ ಮೂಡುವ ದಾರಿಯ ಸೆಳೆತಗಳು,ಅಡೆತಡೆಗಳು, ಸೋಮಾರಿತನ ಇದೆಲ್ಲವನ್ನೂ ಮೆಟ್ಟಿ ಮುಂದುವರಿಯುವ ಛಲ ಎಲ್ಲರಲ್ಲೂ ಇಲ್ಲ. ಹೋಗಲಿ ಬಿಡು ಅನ್ನುವುದು ಸುಲಭದ ದಾರಿ. ಈ ಹುಡುಗ ತನ್ನ ತೀವ್ರತೆಯನ್ನ ಕಳೆದುಕೊಳ್ಳದೇ ಅಂದುಕೊಂಡ ದಾರಿಯ ಮೊದಲ ಮೊಗ್ಗು ಅರಳಿಸಿಯೇ ಬಿಟ್ಟಿದ್ದಾನೆ.
ಇಂಪಿನ ದೂರ ದಾರಿಯನ್ನ ಸಾಗುವ ಚೈತನ್ಯ, ಸಂಗಾತಿಯ ಜೊತೆ ಇವನಿಗಿದೆ. ಗೆಳೆಯರ ಬಳಗವಿದೆ, ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಪ್ರಾಮಾಣಿಕವಾದ ಫ್ರೆಶ್ ಆದ ಮನಸ್ಸಿದೆ.
ಅಂತರಾಳದಲ್ಲಿ ಭಾವಜೀವಿಯೊಬ್ಬನ ಮೆಲ್ದನಿಗಳ ಹಾಯಿದೋಣಿಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ದೋಣಿ, ದೊಡ್ಡ ನಾವೆಯಾಗಿ ಭಾವ-ಗೀತೆಗಳ, ಸುಗಮ ಸಂಗೀತದ ಸಮುದ್ರದಲ್ಲಿ ತೇಲಲಿ ಎಂಬುದು ನನ್ನ ಹಾರೈಕೆ.
ಸುಲಭ ಪುನರಾವರ್ತಿತ ಪದಗಳ ಹಂಗನ್ನು ಮೀರಿ, ಟ್ಯೂನುಗಳಿಗೆ ಕವಿತೆಯನ್ನು ಹೊಂದಿಸುವ ಅವಶ್ಯಕತೆಯನ್ನು ದಾಟಿ, ನಮ್ಮ ಹಿರಿಯ, ಮತ್ತು ಇತ್ತೀಚಿನವರೆಗಿನ ಕವಿಗಳ ಕವಿತಾ ಸಂಗ್ರಹಕ್ಕೆ ದೀಪು ಸಂಗೀತ ಸಂಯೋಜಿಸುವಂತಾಗಲಿ. ಕನ್ನಡ ಬರಿಯ ನಾಡ ಉತ್ಸವಗಳಲ್ಲಿ ಬಿಕರಿಯಾಗುವ ಮಾಲು ಎಂಬ ಮಾತುಗಳನ್ನು ಸುಳ್ಳು ಮಾಡುವ, ನೆಟ್ ಯುಗದ ಯುವ ಕನ್ನಡ ಮನಕ್ಕೆ ಸೇತುವೆಯಾಗುವ ಕೆಲಸವು ದೀಪುವಿನಿಂದ ಮತ್ತವನ ಗೆಳೆಯರ ಬಳಗದಿಂದ ಆಗಲಿ ಎಂದು ಬಯಸುತ್ತೇನೆ.

ಒಳಿತೇ ಹಾಡಾಗುವ ದಾರಿಯಲ್ಲಿ ದೀಪಕ ರಾಗ ನುಡಿಸಿದ ಈ ಕಿರಿಯ ವಯಸ್ಸಿನ ತುಂಬು ಚೈತನ್ಯಕ್ಕೆ ನನ್ನ ಮೆಚ್ಚುಗೆ,ಅಭಿನಂದನೆ.
ಅಂತರಾಳ ಧ್ವನಿಮುದ್ರಿಕೆ(ಅಡಕಮುದ್ರಿಕೆ)ಯನ್ನು ನೀವೂ ತಗೊಂಡು, ಕೇಳಿ, ಬೆನ್ತಟ್ಟಬೇಕು.

Thursday, January 12, 2012

ಹೂವು ಚೆಲ್ಲಿ-ದ ಹಾದಿ

ಉದಾತ್ತ ಹೆಜ್ಜೆಗಳ
ಭಾರಕ್ಕೆ
ನಲುಗಿದ ಕಾಲ ಕೆಳಗಿನ ಹೂಗಳ ಬಣ್ಣ
ಮಾಸಲು ಮಾಸಲು,
ಆಗಸಕ್ಕೆ ಮುಖವೆತ್ತರಿಸಿದ
ಕನಸುಕೊಂಬೆಗಳ ತುದಿಗೆ
ಬಿರಿಯದ ಮೊಗ್ಗುಗಳ ಬಣ್ಣದ ಹಂಬಲು.
ಬೇರುಗಳ ಮಾತು ಬೇಡ
ಕಂಪೌಂಡಿಗೆ ಘಾತವಾಗುತ್ತೇಂತ
ಬೇರಿಳಿವ ಜಾತಿಯ ನೆಡುವುದಿಲ್ಲ.

ತೆರೆದ ಬಾಗಿಲಿನ
ಮುಖಮಂಟಪ
-ದ ಒಳಗೆ ಹರಿದ ದಾರಿ
-ಯ ಕೊನೆಗೆ
ಮುಚ್ಚಿದ ಕೊಠಡಿ
ತುಂಬ ಕಿಟಕಿಗಳು
ಭಾರದ ಕದ ತಿರುಗಣೆಯಲ್ಲಿ
ಸಿಕ್ಕಿಹಾಕಿಕೊಂಡಿದೆ
ತೆಗೆಯಲಾಗುವುದಿಲ್ಲ.
ಹೊರಗಿನ ಬೆಳಕು ಬೇಕು ಯಾಕೆ
ಒಳಗೆ ಝಗಮಗಿಸುವ ದೀಪ
ಏಸಿಯ ವೆಂಟು
ಬಾಯಲ್ಲಿ ಕರಗುವ ಐಸ್ಕ್ರೀಮು
ತಿನ್ನುತ್ತ
ನೆನಪಾಗುವ ನಿಂಬೆಹುಳಿ ಪೆಪ್ಪರ್ ಮಿಂಟು.

ದಾರಿಬದಿಯಲಿ ಹೂಬಿಟ್ಟ ಸಂಪಿಗೆಮರ
ಜಡಿದು ಕೂರಿಸಿದ್ದರೂ ಎಲ್ಲೋ ಸಂದಿನಲ್ಲಿ
ತೂರಿಬರುವ ಗಾಢ ಕಂಪು.
ಅರೆಗತ್ತಲ ಬೀದಿಯ
ಹೂವು ಸುರಿವ ಸಂಜೆಯಲಿ
ಜತೆಗೆ ಹೋದ ಒದ್ದೆ ಹೆಜ್ಜೆಗಳು
ಮೋಡ ತುಂಬಿದ
ಆಗಸದಲಿ ಕದ್ದು ಹೊಳೆವ
ತಿಂಗಳು
ಇರುಳ ಹೆರಳಿನ ತುಂಬ
ರಾತ್ರಿರಾಣಿ ಘಮಘಮಿಸಿ
ಅಲ್ಲಿ ಕತ್ತಲಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಈ ನೆನಪಿನ ಮಾತು ಬೇಡ ಈಗ
ಇದೊಂದು ಹುಚ್ಚು ಮಂಪರು
ಮಲಗಲು ಒಳ್ಳೆ ಸ್ಲೀಪ್ ವೆಲ್ ಹಾಸಿಗೆಯಿದೆಯಲ್ಲ
ಸುಮ್ಮನೆ ಮಲಗು
ಬೆಳಿಗ್ಗೆ ಬೇಗ ಏಳಬೇಕು.

ಪಾಟಿನೊಳಗಿನ ಮಲ್ಲಿಗೆ ಬಳ್ಳಿಯ
ಕರುಣೆ
ದಿನದಿನವೂ
ಎರಡೆರಡೇ ಅರಳು ಮೊಗ್ಗು.

ಕಲ್ಲುಮುಳ್ಳು ಹಾದಿಯ
ನೋವನುಂಡು ನಡೆದವರು
ಹೂವು ಚೆಲ್ಲಿ-ದ ಹಾದಿಯ
ನುಣ್ಪು ದುಃಖದಿ
ಜಾರಿ ಬಿದ್ದರು,
ಉದಾತ್ತ ಹೆಜ್ಜೆಗಳು ಬಲು ಭಾರ!

Tuesday, January 10, 2012

ಈ ಹುಚ್ಚಿಗೆ ಹೆಸರು ಬೇಕೆ?

ಹಿತವಾದ ಕತ್ತಲ ಇಳಿಸಂಜೆ
ಮಾತುಕತೆ ಮುಗಿಸಿ ಹಗುರಾಗಿ
ಬೀಸುಹೆಜ್ಜೆಯ ಲಘುನಡಿಗೆಯಲಿ
ಬೇಲಿ ದಾಟುವಾಗ ಮನೆಯಂಗಳದಿ-
ಪುಟ್ಟಗೆ ಉರಿವ
ತುಳಸಿಯ ದೀಪ
ಹಚ್ಚಿಡುವ ನೀನು,
ಸುಖಾಸುಮ್ಮನೆ ಕಡೆಗಣ್ಣಲಿ
ನೋಡಿದ್ಯಾಕೆ?

ದೀಪದ ಬೆಳಕನ್ನಷ್ಟೆ ತುಂಬಿಕೊಂಡು
ಮುನ್ನಡೆಯಲಿದ್ದ ನನ್ನ
ಜಗ್ಗಿ ನಿಲ್ಲಿಸಿ, ಮುಗ್ಗರಿಸಿ
ತಿರುತಿರುಗಿ ನೋಡುತ್ತ
ಹೊರಡಲಾರದೆ ಹೊರಟೆ..
ಈಗ ನೋಡು-
ಮಳೆ ನಿಂತ ತಂಪಲ್ಲು
ಹೊತ್ತಿ ಉರಿವ ಒಳಗು!
ನಿನಗೇನೂ..ಅಮ್ಮನ ಕರೆಗೆ
ಜೋಡು ಜಡೆಯ ಬೀಸುತ್ತ
ಕುಣಿವ ಹೆಜ್ಜೆಗಳಲ್ಲಿ ಓಡುತ್ತ
ಹೋಗುವ ಹೊತ್ತು;
ನಾನಿಲ್ಲಿ
ಹೆಜ್ಜೆ ಇಲ್ಲಿಡಲಾ ಬೇಡವಾ
ಯೋಚಿಸುತ್ತಾ
ಕಳೆಯದೇ ಜಾರುವ ಹೊತ್ತನ್ನ
ತುಂಬಲಾರದೆ ನೋಯುತ್ತಾ..

ಹೋಗೇ ಮರಿರಾಕ್ಷಸೀ,
ಇನ್ನೊಮ್ಮೆ ನಿನ್ನ ಯೋಚನೆ ಸುಳಿದರೆ ಕೇಳು
ನಿನ್ನ ದೀಪದುರಿಯ ಕುಡಿಗಣ್ಣು
ನನ್ನ ಕೆನ್ನೆಯ ಕತ್ತಲ ಮೇಲೆ ಪ್ರತಿಫಲಿಸುವವರೆಗೂ..
ಜನ ಹೇಳುತ್ತಾರೆ
ಪ್ರೀತಿ ಪ್ರೇಮ ಬರಿಯ ಮರುಳು..
ಹೌದಾ..?
ಅವರಿಗೇನು ಗೊತ್ತು
ನಿನ್ನ ಕಣ್ಣಿನ ಅಮಲು.